ಆನೆ ದಾಳಿಯಿಂದ ದುರ್ಮರಣಕ್ಕೀಡಾದ ರೈತನ ಅಂತಿಮ ದರ್ಶನ ಪಡೆದ ಶಾಸಕ ಎ.ಎಸ್ ಪೊನ್ನಣ್ಣ

ಆನೆ ದಾಳಿಯಿಂದ ದುರ್ಮರಣಕ್ಕೀಡಾದ ರೈತನ ಅಂತಿಮ ದರ್ಶನ ಪಡೆದ ಶಾಸಕ ಎ.ಎಸ್ ಪೊನ್ನಣ್ಣ

ಮಡಿಕೇರಿ:ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ನೆನ್ನೆ ರಾತ್ರಿ ಆನೆ ದಾಳಿಯಿಂದ ಮೃತಪಟ್ಟ ಕೊಪ್ಪದ ಶಿವಪ್ಪ (72) ಎಂಬ ರೈತನ ಪಾರ್ಥೀವ ಶರೀರವನ್ನು ಇಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಅಂತಿಮ ದರ್ಶನ ಪಡೆದರು .

ಇಂದು ಅಂತಿಮ ದರ್ಶನ ಪಡೆದ ಬಳಿಕ ಮನೆಯವರಿಗೆ ಸಾಂತ್ವನ ಹೇಳಿದ ಶಾಸಕರು ಪರಿಹಾರ ಚೆಕ್ ನ ಮೊದಲ ಕಂತನ್ನು ಮನೆ ಯವರಿಗೆ ಹಸ್ತಾಂತರಿಸಿದರು. ಬಳಿಕ ಜನರ ಆತಂಕವನ್ನು ಆಲಿಸಿದ ಶಾಸಕರು, ಈಗಾಗಲೇ ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.

 ಗ್ರಾಮಸ್ಥರಿಗೆ ಭರವಸೆ ನೀಡಿದ ಬಳಿಕ ಅರಣ್ಯಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಡಬ್ಬಡ್ಕ ಭಾಗದಲ್ಲಿ ರೈಲ್ವೆ ಬ್ಯಾರಿಕೆಡ್ ಸೋಲಾರ್ ದೀಪ ಹೆಚ್ಚುವರಿ ಇ ಟಿ ಎಫ್ ಹಾಗೂ ಆರ್ ಆರ್ ಎಫ್ ಪಡೆಗಳನ್ನು ಕರೆಯುತ್ತಿರುವಂತೆಯೂ ಹಾಗೂ ಶಾಲಾ ಮಕ್ಕಳ ಓಡಾಟಕ್ಕೆ ಇಲಾಖೆ ವತಿಯಿಂದ ಒಂದು ವಾಹನ ವ್ಯವಸ್ಥೆಯನ್ನು ಮಾಡುವಂತೆಯೂ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ಮಧು ಹೊಸೂರು, ಜಯಂತ ಹೊಸೂರು, ಡಿ ಸಿ ಎಫ್, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ವೈದ್ಯರು ಉಪಸ್ಥಿತರಿದ್ದರು.