ಮಡಿಕೇರಿ ಜೈಲಿನಲ್ಲಿ ಕೈದಿ ಸಾವು ಪ್ರಕರಣ: ಡಿಜಿಪಿ, ಡಿಐಜಿ ಭೇಟಿ, ಪರಿಶೀಲನೆ
ಮಡಿಕೇರಿ;ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ವಿಚಾರಣಾಧೀನ ಕೈದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಶುಕ್ರವಾರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಆಲೋಕ್ ಕುಮಾರ್ ಹಾಗೂ ಕಾರಾಗೃಹ ದಕ್ಷಿಣ ವಲಯ ಡಿಐಜಿ ಕೆ.ಸಿ.ದಿವ್ಯಶ್ರೀ ಮಡಿಕೇರಿ ಕಾರಾಗ್ರಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ಮಧ್ಯೆ ಉಂಟಾದ ಹೊಡೆದಾಟದಲ್ಲಿ ವಿಚಾರಣಾಧೀನ ಕೈದಿ ಹೇಮಂತ್ (26) ಮೃತಪಟ್ಟಿದ್ದ, ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಈ ಇಬ್ಬರೂ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ಡಿಜಿಪಿ ಅಲೋಕ್ ಕುಮಾರ್, "ಘಟನೆ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ,'' ಎಂದರು.
ಡಿಐಜಿ ಕೆ.ಸಿ.ದಿವ್ಯಶ್ರೀ ಮಾತನಾಡಿ, "ಇಂತಹ ಘಟನೆಗಳಾದಾಗ ಇಲಾಖೆ ಅದನ್ನು ಗಂಭೀ ರವಾಗಿ ಪರಿಗಣಿಸುತ್ತದೆ. ಜೈಲಿನ ಸಿಬ್ಬಂದಿ ಸೇರಿದಂತ ಸಹ ಕೈದಿಗಳನ್ನು ವಿಚಾರಣೆ ನಡೆಸಲಾಗು ವುದು. ತನಿಖೆಯ ಬಳಿಕ ಲೋಪಗಳು ಕಂಡುಬಂದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವು ದು. ಮುಂದೆ ಇಂತಹ ಘಟನೆಗಳನ್ನು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು,'' ಎಂದರು.
'ಇಲ್ಲಿನ ಕಾರಾಗೃಹದಲ್ಲಿ ಶೇ 45ರಷ್ಟು ಸಿಬ್ಬಂದಿ ಕೊರತೆ ಇದೆ. ಖಾಲಿ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ,'' ಎಂದು ಮಾಹಿತಿ ನೀಡಿದರು.
