ಶನಿವಾರಸಂತೆ;ಶ್ರದ್ದಾಭಕ್ತಿಯಿಂದ ಸಂಪನ್ನಗೊಡ ಶ್ರೀ ರಾಮನವಮಿ
ಶನಿವಾರಸಂತೆ:ಮಾ27:-ಸ್ಥಳೀಯ ಶ್ರೀ ರಾಮ ಮಂದಿರದಲ್ಲಿ ಶುಕ್ರವಾರ ಶ್ರೀರಾಮನವಮಿ ಮಹೋತ್ಸವವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.
ದೇವಸ್ಥಾನ ಸಮಿತಿಯಿಂದ ಸಮಿತಿಯಿಂದ ಶ್ರೀರಾಮನವಮಿ ಪ್ರಯುಕ್ತವಾಗಿ ಮಾ 19 ಯುಗಾದಿ ಹಬ್ಬದ ದಿನದಿಂದ ಶ್ರೀ ರಾಮ ಮಂದಿರದಲ್ಲಿ ಪ್ರತಿದಿನ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಶ್ರೀ ರಾಮೋತ್ಸವವನ್ನು ಆಚರಿಸಲಾಯಿತು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶ್ರೀರಾಮನವಮಿ ಪ್ರಯುಕ್ತ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ, ಹೋಮ ಇನ್ನು ಮುಂತಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ 8 ಗಂಟೆಗೆ ದೇವರಿಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಕಾರ್ಯ ನೆರವೇರಿಸಿದ ಬಳಿಕ ದೇವರಿಗೆ ವಿಷ್ಣುಸಹಸ್ರನಾಮ, ರಾಮತಾರಕ ಹೋಮ, ಪೂರ್ಣಾಹುತಿ ಮುಂತಾದ ವಿದಿ ವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಅರ್ಚಕರಾದ ಶೇಷಾಚಲ, ಮಾಲತೇಶ್ ಭಟ್, ಸುಹಾಸ್ ಭಟ್ ನೇತೃತ್ವದಲ್ಲಿ ಅರ್ಚಕರು ಪೂಜಾ ವಿದಿ ವಿಧಾನ ನೆರವೇರಿಸಿದರು. ಮಧ್ಯಾಹ್ನ 12-30 ರಿಂದ ಭಕ್ತಾಧಿಗಳು ಶ್ರೀ ರಾಮ ದೇವರ ದರ್ಶನ ಪಡೆದರು.
ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು ಮತ್ತು ಪಾನಕವನ್ನು ವಿತರಿಸಲಾಯಿತು. ಮಧ್ಯಾಹ್ನ 4 ಗಂಟೆಗೆ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ಶ್ರೀ ರಾಮ ದೇವರ ಉತ್ಸವ ಮೂರ್ತಿಗಳನ್ನು ಅಡ್ಡ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಬಣೆಯಿಂದ ಮೆರವಣಿಗೆ ನಡೆಸಲಾಯಿತು. ಸಂಜೆ 7-30 ಕ್ಕೆ ಮಾಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಶ್ರೀರಾಮನವಮಿ ಪೂಜಾ ಮಹೋತ್ಸವ ಸಂಪನ್ನಗೊಂಡಿತು.
