ನೆಲ್ಯಹುದಿಕೇರಿ: ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಕ್ರೀಡಾ ಹಬ್ಬಕ್ಕೆ ಚಾಲನೆ

ನೆಲ್ಯಹುದಿಕೇರಿ: ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಕ್ರೀಡಾ ಹಬ್ಬಕ್ಕೆ ಚಾಲನೆ

ಸಿದ್ದಾಪುರ :- ನೆಲ್ಯಹುದಿಕೇರಿ ನಾಲ್ಕನೇ ವಾರ್ಡ್ ವತಿಯಿಂದ ಆಯೋಜಿಸಲಾದ ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಕ್ರೀಡಾಕೂಟಕ್ಕೆ ಭರ್ಜರಿ ಚಾಲನೆ ದೊರೆಯಿತು.

ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, “ಒಗ್ಗಟ್ಟಿನಲ್ಲಿ ಬಲವಿದೆ ಎಂಬ ವೇದ ವಾಕ್ಯದಂತೆ, ನಾಲ್ಕನೇ ವಾರ್ಡಿನ ಜನರನ್ನು ಒಂದಾಗಿ ಸೇರಿಸಿ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ಇದು ಕೇವಲ ಪಂದ್ಯಾಟವಲ್ಲ, ವಾರ್ಡಿನ ಸಮಗ್ರ ಕ್ರೀಡಾ ಹಬ್ಬವಾಗಿದೆ,” ಎಂದು ಹೇಳಿದರು. 

ಲಕ್ಕಿ ಇಲವನ್ ಅಧ್ಯಕ್ಷ ಸತ್ಯ ಮಾತನಾಡಿ, “ಇಂದಿನ ತುರ್ತು ಜೀವನದಲ್ಲಿ ಸಾಮಾಜಿಕ ಹಾಗೂ ಕೌಟುಂಬಿಕ ಒತ್ತಡಗಳ ನಡುವೆ ಜನರು ಒಂದಾಗಿ ಸಂತೋಷ ಹಂಚಿಕೊಳ್ಳುವ ವೇದಿಕೆಯಾಗಿ ಈ ಕ್ರೀಡಾಕೂಟ ಕಾರ್ಯನಿರ್ವಹಿಸುತ್ತದೆ. ಏಪ್ರಿಲ್ 23ರಿಂದ 26ರವರೆಗೆ ನಡೆಯುವ ಈ ಹಬ್ಬದಲ್ಲಿ ಮೊದಲ ಮೂರು ದಿನಗಳು ಕ್ರಿಕೆಟ್ ಪಂದ್ಯಾಟಗಳು ನಡೆಯಲಿದ್ದು, ನಾಲ್ಕನೇ ದಿನ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಮನರಂಜನಾ ಸ್ಪರ್ಧೆಗಳು ಆಯೋಜಿಸಲಾಗಿದೆ,” ಎಂದರು.

 ಹಗ್ಗಜಗ್ಗಾಟ, ಸಂಗೀತ ಕುರ್ಚಿ (ಮ್ಯೂಸಿಕಲ್ ಚೇರ್), ಭಾರದ ಗುಂಡು ಎಸೆತ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಪಿಐಎಂ ಶಾಖಾ ಕಾರ್ಯದರ್ಶಿ ಪಿ.ಆರ್. ಭರತ್, ನೆಲ್ಯಹುದಿಕೇರಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮೀ, ಮಾಜಿ ಅಧ್ಯಕ್ಷ ಹಕ್ಕಿಂ, ಮಾಜಿ ಸದಸ್ಯ ಸಪೀಯ, ಸುವೈದ ಅಶ್ರಫ್, ದೇವಸಿ ಟಿ. ಪಿ., ಲಿಂಬ್ರ ಫಾಸಿಲ್, ಕೆ.ಎಂ. ಬಶೀರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಫ ಪಿ.ಕೆ., ಡೊಮಿನೋಸ್ ಸಂಘದ ಶೌಕತ್ ಸೇರಿದಂತೆ ಲಕ್ಕಿ ಇಲವನ್ ಸದಸ್ಯರಾದ ನಿಖಿಲ್, ಮುಸ್ತಫ, ರಫೀಕ್, ಅಪ್ಸಲ್, ಉದಯ ಮತ್ತಿತರರು ಹಾಜರಿದ್ದರು. ಕ್ರೀಡಾಭಿಮಾನಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.