ನ.19ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ನಮ್ಮೆಯ ಘಳಿಗೆ ನಿಗದಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು:ಇದೇ ತಿಂಗಳ 19ರಂದು ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ದೇಶಕಟ್ಟು ಜಾರಿ ಮತ್ತು ಪುತ್ತರಿ ನಮ್ಮೆಯ ದಿನ ಹಾಗೂ ಶುಭಮುಹೂರ್ತಘಳಿಗೆ ನಿಗದಿಯಾಗಲಿದೆ ಎಂದು ಇಗ್ಗುತ್ತಪ್ಪ ದೇವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಡಿಯ ಪ್ರಾಚೀನ ಸಂಪ್ರದಾಯದಂತೆ ಇದೇ ನ.19ರ ಬುಧವಾರ ದಿನ ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಪರಂಪರಾಗತ "ಪತ್ತೆಪರೆ" ಯಲ್ಲಿ ಬೆಳಿಗ್ಗೆ 10.30 ಘಂಟೆಗೆ ದೇವತಕ್ಕರು ಮತ್ತು,ತಕ್ಕಮುಖ್ಯಸ್ಥರು ನಾಡುತಕ್ಕರನ್ನೊಳಗೊಂಡ ಸಭೆಯಲ್ಲಿ ದೇವಸ್ಥಾನದ ಜ್ಯೋತಿಷ್ಯ ಶಾಸ್ತ್ರಾಧಿಕಾರಿಗಳಾದ ಅಮ್ಮಂಗೇರಿ ಕಣಿಯರಿಂದ ಪುತ್ತರಿ ದಿನ ಮತ್ತು ಕದಿರು ತೆಗೆಯುವ ಶುಭ ಗಳಿಗೆಯನ್ನು ನಿಗದಿಗೊಳಿಸಲಾಗುವುದು.
ಅದೇ ದಿನ ಮಧ್ಯಾಹ್ನದ ನಿತ್ಯ ಪೂಜೆಯ ನಂತರ ಅಪರಾಹ್ನ ಆದಿ ಸ್ಥಾನ ಮಲ್ಮದಲ್ಲಿ "ದೇಶಕಟ್ಟು" ಜಾರಿಯಾಗಲಿದೆ. ದೇಶಕಟ್ಟು ಡಿ. 4ರ ಬಿರ್ಚ್ಯಾರ್ ಕಲ್ಲಾಡ್ಚ ನಮ್ಮೆಯವರೆಗೂ ಜಾರಿಯಲ್ಲಿದ್ದು ಅಂದು ಮಲ್ಮದಲ್ಲಿ ಸಾಂಪ್ರದಾಯಿಕ ವಿಧಿವಿಧಾನದೊಂದಿಗೆ ಮತ್ತು ಉತ್ಸವ ಮೂರ್ತಿಯನ್ನು ಮಲ್ಮ ಬೆಟ್ಟಕ್ಕೆ ಕೊಂಡೊಯ್ದು ಬಳಿಕ ಪಾಡಿ,ನೆಲಜಿ, ಪೇರೂರುರಿನಿಂದ ವಿವಿಧ ತಕ್ಕಮುಖ್ಯಸ್ತರ ಐನ್ಮನೆಗಳಿಂದ ಆಗಮಿಸುವ ಎತ್ತುಪೊರಾಟದೊಂದಿಗೆ (ಜೋಡೆತ್ತುಗಳ ಪೋರಾಟ) ಆದಿ ಸ್ಥಾನ ಮಲ್ಮದಲ್ಲಿ ಒಟ್ಟುಗೂಡಿ ಮಲ್ಮದ ದೇವನೆಲೆಯ ಪ್ರದಕ್ಷಿಣೆಯ ತರುವಾಯ ನೈವೇದ್ಯ ಅರ್ಪಣೆಗೂ ಮುನ್ನ ಸಾಂಪ್ರದಾಯಿಕವಾಗಿ ತಂದಂತಹ "ಪೋರ್" ಅಂದರೆ ಜೋಡೆತ್ತುಗಳೊಂದಿಗೆ ತಂದಂತಹ ಧಾನ್ಯದ ರಾಶಿಯನ್ನು ಒಟ್ಟಿಗೆ ಸುರಿದು ಸಂಜೆ ವೇಳೆಗೆ ದೇವತಕ್ಕರು ಅದನ್ನು ಇಬ್ಭಾಗ ಮಾಡುವುದರೊಂದಿಗೆ "ದೇಶಕಟ್ಟು" ಕೊನೆಗೊಳ್ಳಲಿದೆ. :
ದೇಶಕಟ್ಟಿನ ವೈಶಿಷ್ಟ್ಯತೆ ಪುತ್ತರಿ ನಮ್ಮೆಯ ಸಡಗರದೊಂದಿಗೆ ಪ್ರಾಚೀನ ಸಂಪ್ರದಾಯದಂತೆ ದೇವತಕ್ಕರು ವಿಧಿಸುವ ಕಟ್ಟುಪಾಡುಗಳಿಗೆ ಅನುಗುಣವಾಗಿ ಕೊಡವ ಸಂಪ್ರದಾಯದಂತೆ ದೇಶಕಟ್ಟು ಜಾರಿಯಾದ ಸಂದರ್ಭದಲ್ಲಿ ಆಡಂಬರದ ಕಾರ್ಯಕ್ರಮಗಳಾದ ಮದುವೆ ಅಥವಾ ನಿಶ್ಚಿತಾರ್ಥ, ನಾಮಕರಣ ದಂತಹ ಸಮಾರಂಭಗಳು ಮತ್ತು ಪ್ರಾಣಿಹಿಂಸೆ, ಪ್ರಾಣಿ ಬಲಿ,ನಿಷಿದ್ದವಾಗಿರುತ್ತದೆ.
ಅಮಾವಾಸ್ಯೆಯ ಆರಂಭದೊಂದಿಗೆ ಮಲ್ಮದಲ್ಲಿ ದೇವತಕ್ಕರ ಪ್ರಾರ್ಥನೆಯೊಂದಿಗೆ ಶುರುವಾಗುವ ಈ ಪ್ರಾಚೀನ ಕಟ್ಟುಪಾಡು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುವ ಚಂದ್ರನ ಪಥಕ್ಕೆ ಅನುಗುಣವಾಗಿ ಅಂತಿಮವಾಗಿ ಹುಣ್ಣಿಮೆಯ ದಿನದಂದು ಅಥವಾ ಹುಣ್ಣಿಮೆಯ ಮುನ್ನಾದಿನ ಅಂತ್ಯಗೊಂಡು, ಸಂಭ್ರಮದ, ಧಾನ್ಯಲಕ್ಮಿಯನ್ನು ಬರಮಾಡಿಕೊಳ್ಳುವ "ಪುತ್ತರಿ"ಗೆ ನಾಂದಿಯಾಗಲಿದೆ. ಈ ಕಟ್ಟುಪಾಡುಗಳು ಪ್ರಾಚೀನ ಇತಿಹಾಸ ಹೊಂದಿದ್ದು ಕೊಡವ ಸಂಪ್ರದಾಯದಂತೆ ಈ ದೇಶಕಟ್ಟಿನ ದಿನಗಳು ವೃದ್ಧಿ, ಸಮೃದ್ಧಿಯ ಧ್ಯೋತಕವಾಗಿವೆ. ಈ ಸಂದರ್ಭ ಕೊಡಗಿನ ಭಕ್ತಾಧಿಗಳು ಪ್ರಾಚೀನ ದೇಶಕಟ್ಟಿನ ನಿಯಮಗಳಿಗೆ ಮನ್ನಣೆ ನೀಡುವಂತೆ ಪಾಡಿ ದೇವನೆಲೆಯ ದೇವತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.