ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ವಜಾಗೊಳಿಸಲು ಎಸ್.ಡಿ.ಪಿ.ಐ ಆಗ್ರಹ:

ಕುಶಾಲನಗರ: ಕಾಂಗ್ರೆಸ್ ಪಕ್ಷದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕುಶಾಲನಗರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುಶಾಲನಗರದ ಎಸ್,ಡಿ.ಪಿ.ಐ ನಗರಾಧ್ಯಕ್ಷ ಜ಼ಕ್ರಿಯಾರವರ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ ಅವರ ಪ್ರತಿಕೃತಿಯನ್ನು ಹಿಡಿದು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ನಂತರ ಕಾಂಗ್ರೆಸ್ ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ಕುರಿತು ಮಾತನಾಡಿದ ಎಸ್.ಡಿ.ಪಿ.ಐ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಕಾಂಗ್ರೆಸ್ ಪಕ್ಷವು ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ ಇಂತಹ ಲಜ್ಜೆಗೆಟ್ಟ ಶಾಸಕರಿಂದ ಅಸಂವಿಧಾನಿಕ ನಡೆಯಿಂದ ಸರ್ಕಾರವೇ ತಲೆತಗ್ಗಿಸುವಂತಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ನೈಜ ಜಾತ್ಯಾತೀತ ಪಕ್ಷವೇ ಆದಲ್ಲಿ ರಮೇಶ್ ಬಂಡಿಸಿದ್ದೇಗೌಡರವರನ್ನು ವಜಾಗೊಳಿಸಬೇಕು ಎಂದರು.
ಎಸ್.ಡಿ.ಪಿ.ಐ ಮುಖಂಡ ಹಾಗೂ ರಾಜ್ಯ ಸಮಿತಿ ಸದಸ್ಯರಾದ ನೂರುದ್ಧೀನ್ ಫಾರೂಖಿ ಮಾತನಾಡಿ, ಮುಸಲ್ಮಾನರ ಹೆಸರಿಗೆ ಜಮೀನು ಮಾಡಿದರೆ ನೇಣಿಗೇರಿಸುವುದಾಗಿ ಅಧಿಕಾರಿಗೆ ಬೆದರಿಕೆ ಹಾಕಿದ ಶಾಸಕನ ವಿರುದ್ಧ ಕೂಡಲೇ ಸಂವಿಧಾನದಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಡಿಕೇರಿ ನಗರಸಭಾ ಸದಸ್ಯ ಬಶೀರ್ ಮಡಿಕೇರಿ,ಮಡಿಕೇರಿ ವಿಧಾನ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಭಾಷಾ, ಪ್ರಮುಖರಾದ ಅಜ಼ೀಜ಼್, ರಫಿಕ್, ಖಲೀಲ್, ಸಲಾಂ ಇನ್ನಿತರರು ಇದ್ದರು.
What's Your Reaction?






