ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಅರೆಭಾಷಿಕರ ಪಾತ್ರ ಅಪಾರ: ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ ಅರೆಭಾಷೆ ಗಡಿನಾಡ ಉತ್ಸವ - 2026ರ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ತೋರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರುತ್ತಾ ಮಾತನಾಡಿದ ಶಾಸಕರು, ಜಿಲ್ಲೆಯ ಹಾಗೂ ಕ್ಷೇತ್ರದ ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಅರೆಭಾಷಿಕರ ಪಾತ್ರ ಬಹುದೊಡ್ಡದಾಗಿದೆ. ಅರೆ ಭಾಷೆ ಮಾತನಾಡುವವರಲ್ಲಿ ಬಹುತೇಕರು ಅರೆ ಭಾಷೆ ಗೌಡ ಜನಾಂಗಕ್ಕೆ ಸೇರಿದವರಾಗಿದ್ದು, ನಾಡಿನ ವಿವಿಧ ರಂಗಗಳಲ್ಲಿ ಅತ್ಯುನ್ನತ ಸ್ಥಾನಕ್ಕೇರಿದವರು ಇರುವುದು ಹೆಗ್ಗಳಿಕೆ ಎಂದು ಬಣ್ಣಿಸಿದರು.
ಜಿಲ್ಲೆಯ ಹಾಗೂ ಕ್ಷೇತ್ರದ ಗಡಿಭಾಗಗಳಲ್ಲಿ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಮತ್ತಷ್ಟು ಪ್ರಚಾರಗೊಳಿಸಲು, ಸಾರ್ವಜನಿಕರಲ್ಲಿ ಇದರ ಸೊಬಗನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ. ಆ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಕಾಡೆಮಿ ಅವರು ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಸದಾನಂದ ಮಾವಜಿ, ವಿರಾಜಪೇಟೆ ಗೌಡ ಸಮಾಜ ಅಧ್ಯಕ್ಷರು ವಾಸು ಗಣಪತಿ, ಅಧ್ಯಕ್ಷರು ಅಭಿವೃದ್ಧಿ ಸಂಘ ಕೆದಮುಳ್ಳುರು ಎಸ್ ದಿನೇಶ್, ಸೂದನ ಈರಪ್ಪ, ಗೌಡ ಸಮಾಜದ ನಿರ್ದೇಶಕರು ಚೋಟ್ಟು ಬಿದ್ದಪ್ಪ,ಸದಸ್ಯರು ಕುಡುಪಾಜೆ ಕೆ ಪ್ರಕಾಶ್, ಲೋಕೇಶ್ ಊರೂಬೈಲು, ಲತಾ ಪ್ರಸಾದ್, ತೇಜಕುಮಾರ್ ಕೂಡೆಕಲ್ಲು, ಪಿ ಎಸ್ ಕಾರ್ಯಪ್ಪ, ಚಂದ್ರಶೇಖರ ಪೇರಾಲು, ಪ್ರಮುಖರು ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
