ಲಾಂಗ್ ಹಿಡಿದು ಪ್ರವಾಸಿಗರಿಗೆ ಕೊಲೆ ಬೆದರಿಕೆ:ಪ್ರವಾಸಿ ಮಹಿಳೆಯಿಂದ ದೂರು ದಾಖಲು
ಮಡಿಕೇರಿ, ಜೂ. 5: ಪ್ರವಾಸಿಗರಿಂದ ಮಹಿಳೆ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿ ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ತಿರುವು ದೊರೆತಿದೆ.ಬೆಂಗಳೂರು ಮೂಲದ ಪ್ರವಾಸಿ ಮಹಿಳೆಯಿಂದಲೂ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಹೊಟೇಲ್ ಮಾಲೀಕರ ವಿರುದ್ಧವೇ ಪ್ರತಿದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ತಾ. 2 ರಂದು ನಗರದ ಅಬ್ಬಿಫಾಲ್ಸ್ ರಸ್ತೆಯಲ್ಲಿರುವ ಅಗಸ್ಟಿನ್ ಎಂಬವರ ಹೊಟೇಲ್ಗೆ ಬಂದ 7 ಜನ ಪ್ರವಾಸಿಗರು ಊಟ ಆರ್ಡರ್ ಮಾಡಿದ್ದು, ಈ ಸಂದರ್ಭ ಗಲಾಟೆ ಏರ್ಪಟ್ಟಿದೆ. ಈ ಸಂದರ್ಭ ಅಗಸ್ಟಿನ್ ಪತ್ನಿ ಅಗ್ನಿಸ್ಗೆ ಪ್ರವಾಸಿಗರು ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ಅಗಸ್ಟಿನ್ ನೀಡಿದ್ದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರತಿದೂರು; ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ಪೈಕಿ ಬೆಂಗಳೂರಿನ ಗೋವಿಂದಪುರ ರಸ್ತೆಯ ನಿವಾಸಿ ಶಹೀದ ಅವರು ಅಗಸ್ಟೀನ್ ಹಾಗೂ ಅಗ್ನಿಸ್ ವಿರುದ್ಧ ಪ್ರತಿದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ನಮ್ಮ ಕುಟುಂಬ ಕೊಡಗಿಗೆ ಪ್ರವಾಸಕ್ಕೆ ಬಂದು ಅಬ್ಬಿಫಾಲ್ಸ್ಗೆ ತೆರಳುವ ಸಂದರ್ಭ ಮಾರ್ಗಮಧ್ಯೆ ಹೊಟೇಲ್ಗೆ ತೆರಳಿ ಊಟ ಅರ್ಡರ್ ಮಾಡಿದ್ದೇವೆ. ಊಟ ತಯಾರು ಮಾಡಿ ನೀಡುತ್ತೇವೆ ಎಂದು ಹೊಟೇಲ್ನವರು ತಿಳಿಸಿದ್ದು.
ಈ ಸಂದರ್ಭ ಅಲ್ಲಿಯೇ ಚಿಪ್ಸ್ ಖರೀದಿಸಿ ಲೆಕ್ಕ ಹೇಳುವ ಸಂದರ್ಭ ಮಾಲೀಕ ಅಗಸ್ಟಿನ್ ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ್ದಾರೆ. ಇದರಿಂದ ಬೇಸರಗೊಂಡು ಊಟ ಬೇಡ ಎಂದು ತೆರಳುವ ಸಂದರ್ಭ ಅಗಸ್ಟಿನ್ ಪತ್ನಿ ಅಗ್ನಿಸ್ ಬಂದು ನಮ್ಮನ್ನು ತಡೆದು, ಕೊಲೆ ಬೆದರಿಕೆಯೊಡ್ಡಿದ್ದಾರೆ.
ಈ ವೇಳೆ ಅಗಸ್ಟಿನ್ ಕೂಡ ಬಂದು ಲಾಂಗ್ ತೋರಿಸಿ ಊಟ ಮಾಡದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ ಎಂದು ಶಹೀದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನಡಿ ಬಿಎನ್ಸ್ ಸೆಕ್ಷನ್ 126 (2) 115 (2), 351 (2) 352 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವೀಡಿಯೋ ವೈರಲ್; ಪ್ರವಾಸಿಗರಿಗೆ ಲಾಂಗ್ ಹಿಡಿದು ಹೊಟೇಲ್ ಮಾಲೀಕ ಅಗಸ್ಟಿನ್ ಬೆದರಿಸುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

