IPL 2025: ಚೊಚ್ಚಲ ಕಿರೀಟಕ್ಕಾಗಿ ಬೆಂಗಳೂರು ಹಾಗೂ ಪಂಜಾಬ್ ನಡುವೆ ಕಾದಾಟ! : ಈ ಸಲ ಕಪ್ ಸಿಗುತ್ತಾ ಆರ್.ಸಿ.ಬಿ ತಂಡಕ್ಕೆ!

Jun 3, 2025 - 00:52
 0  51
IPL 2025: ಚೊಚ್ಚಲ ಕಿರೀಟಕ್ಕಾಗಿ ಬೆಂಗಳೂರು ಹಾಗೂ ಪಂಜಾಬ್ ನಡುವೆ ಕಾದಾಟ! : ಈ ಸಲ ಕಪ್ ಸಿಗುತ್ತಾ ಆರ್.ಸಿ.ಬಿ ತಂಡಕ್ಕೆ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಅಹಮದಾಬಾದ್: ಐಪಿಎಲ್ ಫೈನಲ್ ಹಂತಕ್ಕೆ ಕಾಲಿಟ್ಟಿದೆ.ಇಂದು ರಾತ್ರಿ 7.30 ಗಂಟೆಗೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2025ರ ಐಪಿಎಲ್ ಕಿರೀಟಕ್ಕಾಗಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ.ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ.ಈ ಬಾರಿಯ ಐಪಿಎಲ್ ಪ್ರಶಸ್ತಿ ಯಾರೇ ಗೆದ್ದರು ಕೂಡ ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆಯಲಿದೆ.ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಬೆಂಗಳೂರು ಹಾಗೂ ಪಂಜಾಬ್ ತಂಡಗಳು ಟ್ರೋಫಿ ಗೆದ್ದಿಲ್ಲ.ಈ ಬಾರಿಯ ಐಪಿಎಲ್ ನಲ್ಲಿ ಒಂದು‌ ತಂಡಕ್ಕೆ ಟ್ರೋಫಿಯ ಬರ ನೀಗಲಿದೆ.ಆದರೆ ಮತ್ತೊಂದು ತಂಡಕ್ಕೆ ಐಪಿಎಲ್ ಟ್ರೋಫಿಯ ಕೊರಗು ಕಾಡಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2009,2011,2016 ರಲ್ಲಿ ಐಪಿಎಲ್ ಫೈನಲ್ ಪ್ರವೇಶಿಸಿ, ಫೈನಲ್ ನಲ್ಲಿ ಸೋಲು ಕಂಡಿತ್ತು.ಇದೀಗ ನಾಲ್ಕನೇ ಬಾರಿಗೆ ಆರ್.ಸಿ.ಬಿ ತಂಡವು ಫೈನಲ್ ಗೆ ಲಗ್ಗೆಯಿಟ್ಟು,ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.ಮತ್ತೊಂದೆಡೆ ಪಂಜಾಬ್ ತಂಡವು 2014ರಲ್ಲಿ ಮೊದಲ ಬಾರಿಗೆ ಐಪಿಎಲ್ ನಲ್ಲಿ ಫೈನಲ್ ಪ್ರವೇಶಿಸಿ,ಕಲ್ಕತ್ತಾ ತಂಡದ ವಿರುದ್ಧ ಸೋಲು ಕಂಡಿದ್ದರ.ಇದೀಗ ಎರಡನೇ ಬಾರಿಗೆ ಪಂಜಾಬ್ ಫೈನಲ್ ಪ್ರವೇಶಿಸಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ವಿಶ್ವಾಸದಲ್ಲಿ ಫೈನಲ್ ಕಾದಾಟಕ್ಕೆ ಬೆಂಗಳೂರು ಸಿದ್ಧತೆ ನಡೆಸುತ್ತಿದ್ದರೆ,ಮತ್ತೊಂದೆಡೆ ಮಾರಕ ಬೌಲಿಂಗ್ ಪಡೆಯನ್ನೊಂದಿದ್ದ ಮುಂಬೈ ತಂಡವನ್ನು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಗ್ಗುಬಡಿದು ಫೈನಲ್ ಲಗ್ಗೆಯಿಟ್ಟಿರುವ ಪಂಜಾಬ್ ತಂಡವು ಕೂಡ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.

 ಈ ಸಲ ಕಪ್ ಸಿಗುತ್ತಾ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನೊಂದಿರುವ ತಂಡ.ಗೆಲ್ಲಲ್ಲಿ-ಸೋಲಿಲಿ ಸದಾ ಆರ್.ಸಿ.ಬಿ ತಂಡದೊಂದಿಗೆ ಗಟ್ಟಿಯಾಗಿ ನಿಲ್ಲುತ್ತಾರೆ ಅಭಿಮಾನಿಗಳು.ಪ್ರತೀ ಬಾರಿ ಕೂಡ ಐಪಿಎಲ್ ಆರಂಭಕ್ಕೂ ‌ಮುನ್ನವೇ ಈ ಸಲ ಕಪ್ ನಮ್ದೇ ಎಂಬ ಉದ್ಘೋಷಣೆಯೊಂದಿಗೆ ಅಭಿಮಾನಿಗಳು ಆರ್.ಸಿ.ಬಿ ತಂಡಕ್ಕೆ ಬೆಂಬಲವಾಗಿ‌ ನಿಲ್ಲುತ್ತಾರೆ.ಆದರೆ ಪ್ರತೀ ಬಾರಿ ಕೂಡ ಐಪಿಎಲ್ ಕಿರೀಟವಿಲ್ಲದೆ ಆರ್.ಸಿ.ಬಿ ತಂಡವು ಐಪಿಎಲ್ ಆವೃತ್ತಿ ಮುಗಿಸುತ್ತಾರೆ. ಈ ಬಾರಿಯ ಆರ್.ಸಿ.ಬಿ ತಂಡದಲ್ಲಿ ಎಲ್ಲವೂ ವಿಭಿನ್ನವಾಗಿದೆ.ಇದುವರೆಗೆ ಒಂದೇ ಒಂದು AWAY ಪಂದ್ಯ ಸೋಲದ ಆರ್.ಸಿ.ಬಿ ತಂಡವು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಗಳಿಸಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತು.ಈ ಬಾರಿಯಾದರೂ ಕೂಡ ಐಪಿಎಲ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.18 ವರ್ಷಗಳಿಂದ ಐಪಿಎಲ್ ನಲ್ಲಿ ಒಂದೇ ತಂಡದಲ್ಲಿ ಆಡುತ್ತಿರುವ ಆರ್.ಸಿ.ಬಿ ತಂಡದ ಬೆನ್ನೆಲುಬು ವಿರಾಟ್ ಕೊಹ್ಲಿಗೆ ಈ ಬಾರಿಯ ಐಪಿಎಲ್ ಫೈನಲ್ ವಿಶೇಷವಾದದ್ದು.ತಂಡದ ನಾಯಕನಾಗಿ ಆರ್.ಸಿ ತಂಡವನ್ನು ಫೈನಲ್ ಸನಿಹ ಕೊಂಡೊಯ್ಯಿದಿದ್ದರೂ ಕೂಡ ಇದುವರೆಗೆ ಐಪಿಎಲ್ ಟ್ರೋಫಿಯಲ್ಲಿ ಮುತ್ತಿಕ್ಕಲು ಸಾಧ್ಯವಾಗಿಲ್ಲ.ಭಾರತದ ತಂಡದ ನಾಯಕರಾಗಿದ್ದ ಎಂ.ಎಸ್ ಧೋನಿ ಹಾಗೂ ರೋಹಿತ್ ಶರ್ಮಾ ತಲಾ ಐದು ಬಾರಿ ಐಪಿಎಲ್ ಟ್ರೋಪಿ ಗೆದ್ದಕೊಂಡಾಗ ಒಂದು ಬಾರಿಯಾದರೂ ಕೂಡ ಐಪಿಎಲ್ ಪ್ರಶಸ್ತಿ ಗೆಲ್ಲಲಿಲ್ಲ ಎಂಬ ಕೊರಗು ಕೊಹ್ಲಿಗೆ ಕಾಡುತ್ತಿದೆ.ಆಟಗಾರನಾಗಿ ಐಸಿಸಿ ಏಕದಿನ -T-20 ವರ್ಲ್ಡ್ ಕಪ್, ಹಾಗೂ ಚಾಂಪಿಯನ್ ಟ್ರೋಫಿ ಮತ್ತು ಅಂಡರ್ 19 ನಾಯಕನಾಗಿ ಭಾರತಕ್ಕೆ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿರುವ ಕೊಯ್ಲಿಗೆ ಒಂದೇ ಒಂದು ಐಪಿಎಲ್ ಕಿರೀಟ ಇಲ್ಲ ಎಂಬ ನೋವು ಅವರ ಅಭಿಮಾನಿಗಳಲ್ಲಿ ಕೂಡ ಇದೆ.ಇನ್ನೇನೂ ಕೇವಲ ಒಂದು ಹೆಜ್ಜೆ ಮಾತ್ರ ಇದೆ.17 ವರ್ಷಗಳ ಕಾಯುವಿಕೆಗೆ 18ನೇ ವರ್ಷವಾದರೂ ಟ್ರೋಫಿ ಗೆಲ್ಲುವ ಅಚಲ ವಿಶ್ವಾಸದಲ್ಲಿ ಇದ್ದಾರೆ.ಒಂದು ವೇಳೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್.ಸಿ‌.ಬಿ ಗೆಲುವು ಸಾಧಿಸಿದೆ ಫುಟ್ಬಾಲ್ ನಲ್ಲಿ ವಿಶ್ವಕಪ್ ಇಲ್ಲದ ಕೊರಗು ನೀಗಿಸಿದ ಲಿಯಾನೊಲ್ ಮೆಸ್ಸಿ ಹಾಗೂ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲವನ್ನೂ ಸಾಧಿಸಿ,ವಿಶ್ವಕಪ್ ಇಲ್ಲದೆ ಕೊರಗುತ್ತಿದ್ದ ಸಚಿನ್ ತೆಂಡೂಲ್ಕರ್ 2011ರಲ್ಲಿ ವಾಂಖೆಡೆಯಲ್ಲಿ ವಿಶ್ವಕಪ್ ಗೆದ್ದ ಮಾದರಿಯಲ್ಲಿ,ವಿರಾಟ್ ಕೊಹ್ಲಿ ಕೂಡ ಐಪಿಎಲ್ ಟ್ರೋಪಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಸೋಲು ಕಂಡರೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಮ್ ಕೊಹ್ಲಿಯ ಕಣ್ಣೀರಿಗೆ ಸಾಕ್ಷಿಯಾಗಲಿದೆ.

ಭರವಸೆಯ ನಾಯಕ ಶ್ರೇಯಸ್ಸ್ ಅಯ್ಯರ್!

ಅಯ್ಯರ್ ಮುಟ್ಟಿದೆಲ್ಲವೂ ಚಿನ್ನ ಎಂಬಂತೆ ತನ್ನ ಐಪಿಎಲ್ ಇತಿಹಾಸದಲ್ಲಿ ತಾನು ನಾಯಕತ್ವ ವಹಿಸಿದ್ದ ಎಲ್ಲಾ ತಂಡವನ್ನು ಫೈನಲ್ ಗೆ ಕಾಲಿರಿಸಿದೆ.ಕಳೆದ ಬಾರಿ ಕೆಕೆಆರ್ ತಂಡದ ನಾಯಕನಾಗಿ ಐಪಿಎಲ್ ಕಪ್ ಗೆದ್ದಿದ್ದರು.ಐಪಿಎಲ್ ಇತಿಹಾಸದಲ್ಲಿ ಫೈನಲ್ ಬಾಗಿಲು ಪ್ರವೇಶ ಕಾಣದ ಡೆಲ್ಲಿ ತಂಡವನ್ನು ಫೈನಲ್ ಗೆ ಕಾಲಿರಿಸಿದ್ದು ಇದೇ ಶ್ರೇಯಸ್ಸ್ ಅಯ್ಯರ್.ಇದೀಗ ಪಂಜಾಬ್ ತಂಡವನ್ನು ಟೇಬಲ್ ಟಾಪರ್ ಮಾಡುವುದರೊಂದಿಗೆ ಫೈನಲ್ ಗೆ ಹಂತಕ್ಕೆ ತಲುಪಿಸಿದ್ದಾರೆ.ತಂಡದ ಕೋಚ್ ರಿಕಿ ಪಾಂಟಿಂಗ್ ಹಾಗೂ ನಾಯಕ ಶ್ರೇಯಸ್ಸ್ ಅಯ್ಯರ್ ಅವರ ಜುಗಲ್ ಬಂದಿ ಪಂಜಾಬ್ ತಂಡಕ್ಕೆ ಯಶಸ್ಸು ತಂದುಕೊಟ್ಟಿದೆ‌.ನಿರ್ಣಾಯಕ ಸಂದರ್ಭದಲ್ಲಿ ತಂಡದ ಬೆನ್ನೆಲುಬಾಗಿ ಒತ್ತಡದ ಸನ್ನಿವೇಶದಲ್ಲಿ ಕೂಡ ಚೇಸಿಂಗ್ ಮಾಡುವ ಶಕ್ತಿ ಶ್ರೇಯಸ್ಸ್ ಅಯ್ಯರ್ ಅವರಿಗಿದೆ.ಇದುವರೆಗೆ ಭಾರತ ತಂಡಕ್ಕೆಆಡದ ಆರು ಅನ್ ಕ್ಯಾಪ್ ಆಟಗಾರರನ್ನು ಆರಂಭಿಕ 11ರ ಬಳಗದಲ್ಲಿ ಆಡಿಸಿ ಯುವ ಪಡೆಗಳೊಂದಿಗೆ ಪಂಜಾಬ್ ತಂಡವು ಫೈನಲ್ ಪ್ರವೇಶಿಸಿದೆ.ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್.ಸಿ.ಬಿ ತಂಡದ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದ ಪಂಜಾಬ್ ತಂಡವು ತಿರುಗೇಟು ನೀಡಲು ಸುವರ್ಣ ಅವಕಾಶ ಒದಗಿ ಬಂದಿದೆ.ಐಪಿಎಲ್ ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ಪಂಜಾಬ್ ತಂಡಕ್ಕೆ ಪ್ರಶಸ್ತಿಗೆ ಮುತ್ತಿಕ್ಕಲು ಇನ್ನೂ ಕೇವಲ‌ ಒಂದು ಹೆಜ್ಜೆ ಬಾಕಿ ಇದೆ.ಯಾವುದೇ ತಂಡದಲ್ಲಿ ಇದ್ದರೂ ಕೂಡ ನಾನು ಎಲ್ಲಿಯೂ ಒಲ್ಲುವವನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲು ಅಯ್ಯರ್ ಗೆ ಮತ್ತೊಂದು ಸುವರ್ಣ ಅವಕಾಶ ಇದೆ.18ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳಲಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0