ಶೋಕಿಗೋಸ್ಕರ ರಾಜಾಸೀಟ್ ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದರೆ ಸಂಕಷ್ಟವನ್ನು ನಾವೇ ಎಳೆದುಕೊಂಡಂತಾಗುತ್ತದೆ: ರಾಜಾಸೀಟ್ ನಲ್ಲಿ ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ಪ್ರತಿಯೊಬ್ಬ ನಾಗರಿಕರು ವಿರೋಧಿಸಬೇಕು:ಶಾಂತೆಯಂಡ ರವಿ ಕುಶಾಲಪ್ಪ
ಮಡಿಕೇರಿ: ರಾಜಾಸೀಟ್ ಉದ್ಯಾನದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ಪ್ರತಿಯೊಬ್ಬ ನಾಗರೀಕರು ವಿರೋಧಿಸುವಂತಾಗಬೇಕು ಎಂದು ಗದ್ದಿಗೆ ಸಂರಕ್ಷಣೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು. ಆದರೆ, ಸುರಕ್ಷಿತವಲ್ಲದ ಸ್ಥಳಗಳಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದರೆ ನಮಗೆ ಸಂಕಷ್ಟ ಎದುರಾಗಲಿದೆ. ಈಗಾಗಲೇ ರಾಜಾಸೀಟ್ ನಲ್ಲಿ ಪ್ರವಾಸಿಗರ ಭೇಟಿ ಸಂದರ್ಭ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆಗಳಿಲ್ಲದೇ ಪರದಾಡುತ್ತಿದ್ದೇವೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆ ರಾಜಾಸೀಟ್ ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜತೆಗೆ ನಗರದ ನಿವಾಸಿಗಳು, ಜಿಲ್ಲೆಯ ಜನತೆ ವಿರೋಧಿಸಬೇಕು ಎಂದು ಮನವಿ ಮಾಡಿದ ಅವರು, ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದಲ್ಲಿ ರಾಜಸೀಟ್ ಉಳಿಸಿ ಎಂಬ ಅಭಿಯಾನ ಮಾಡಲಾಗುವುದು.
ಇದರೊಂದಿಗೆ ಸಾರ್ವಜನಿಕರ ಸಹಿ ಸಂಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ಡಿಸಿ ಕಚೇರಿ ಕಟ್ಡಿದ ಸ್ಥಳವು ಸುರಕ್ಷಿತವಲ್ಲ. ಅದನ್ನು ಕಟ್ಟಿದ್ದೇ ಒಂದು ದೊಡ್ಡ ದುರಂತ ಎಂದ ಅವರು, ನಮ್ಮ ಪಾವಿತ್ರ್ಯತೆಯನ್ನು ನಾವು ಉಳಿಸಿಕೊಂಡು ಹೋಗಬೇಕು. ಶೋಕಿಗೋಸ್ಕರ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿದರೆ, ಸಂಕಷ್ಟವನ್ನು ನಾವೇ ಎಳೆದುಕೊಂಡಂತಾಗುತ್ತದೆ. 2018ರಲ್ಲಿ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದೆ ಎಂಬುದನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳಬೇಕು. ಈ ಹಿನ್ನೆಲೆ ಜಿಲ್ಲೆಯ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಕ್ರಮಕೈಗೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೂಡ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಬಿ.ಧರ್ಮಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಖಜಾಂಚಿ ಎಚ್.ಪಿ.ಉದಯ್ ಕುಮಾರ್ ಉಪಸ್ಥಿತರಿದ್ದರು.
(ಸುದ್ದಿ ಕದಿಯಬೇಡಿ)