ಪತ್ರಿಕಾ ದಿನಾಚರಣೆ: ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬಕ್ ವಿತರಣೆ
ಕುಶಾಲನಗರ, ಜು 01:ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ಎಸ್.ಎಲ್.ವಿ.ಬುಕ್ ಹೌಸ್ ಮಾಲೀಕರಾದ ದಿವಾಕರ ದಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪತ್ರಿಕೋದ್ಯಮದ ಗೌರವ, ಘನತೆ, ಜವಬ್ದಾರಿ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದುವ ಅಗತ್ಯವಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ಉದಾಹರಣೆಗಳಿದೆ. ಸಾಮಾಜಿಕ ಬದಲಾವಣೆಗೆ ಪತ್ರಿಕೋದ್ಯಮ ಆಯ್ಕೆ ಕೂಡ ವಿದ್ಯಾರ್ಥಿಗಳಿಗಿದೆ. ವಿದ್ಯಾರ್ಥಿ ದಿಸೆಯಿಂದಲೇ ತಮ್ಮ ಭವಿಷ್ಯದ ಗುರಿ ಈಡೇರಿಕೆಗೆ ಶ್ರಮವಹಿಸಿದಲ್ಲಿ ಮುಂದೆ ಸಾಧಕರಾಗಬಹುದು ಎಂದು ಕಿವಿ ಮಾತು ಹೇಳಿದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಧೇಯತೆ, ವಿನಯವಂತಿಕೆ ಮೈಗೂಡಿಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು ದಿನನಿತ್ಯದ ಆಗುಹೋಗುಗಳ ಬಗ್ಗೆ ಅರಿವು ಹಾಗೂ ಪ್ರಪಂಚ ಜ್ಞಾನ ವೃದ್ದಿಸಿಕೊಳ್ಳಲು ಕರೆ ನೀಡಿದರು. ಹಿರಿಯ ಪತ್ರಿಕಾ ವಿತರಕ ವಿ.ಪಿ.ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಳೆಗಾಲಕ್ಕೆ ಅನುಕೂಲವಾಗುವಂತೆ ರೈನ್ ಕೋಟ್ ವಿತರಿಸಲಾಯಿತು. ಎಸ್.ಎಲ್.ವಿ.ಬುಕ್ ಹೌಸ್ ವತಿಯಿಂದ ಶಾಲೆಯ 103 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು, ಪೆನ್ ಕೊಡುಗೆ ನೀಡಲಾಯಿತು.
ಪತ್ರಿಕಾ ದಿನದ ಅಂಗವಾಗಿ ಒಂದು ವರ್ಷದ ಅವಧಿಗೆ ಶಾಲೆಗೆ ವಿವಿಧ ದಿನಪತ್ರಿಕೆ ಒದಗಿಸುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಪತ್ರಿಕೆಗಳ ಓದಿನಿಂದ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ರಾಜಕೀಯ, ಸಿನಿಮಾ, ಸಾಧನೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅಪಾರವಾದ ಜ್ಞಾನ ಬೆಳೆಸಿಕೊಳ್ಳಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಆಶಾ, ದಾನಿಗಳಾದ ರಾಮದಾಸ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಪೆರುಮಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ತಾಲೂಕು ಸಂಘದ ಖಜಾಂಚಿ ವಿನೋದ್, ನಿರ್ದೇಶಕ ಜಯಪ್ರಕಾಶ್, ಸದಸ್ಯರಾದ ಭೋಜಣ್ಣ ರೆಡ್ಡಿ, ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಇದ್ದರು. ಶಾಲಾ ಶಿಕ್ಷಕಿ ತುಳಸಿ ಸ್ವಾಗತಿಸಿದರು. ಸದಸ್ಯರಾದ ಭೋಜನ ರೆಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷೆ ವನಿಯಾ ಚಂದ್ರಮೋಹನ್ ವಂದಿಸಿದರು.

