ಸೋಮವಾರಪೇಟೆ: ಸಿ ಆ್ಯಂಡ್ ಡಿ ಭೂಮಿಯ ಸೆಕ್ಷನ್-5 ಸರ್ವೆಗೆ ಕೃಷಿಕರಿಗೆ ನೋಟೀಸ್

ಸೋಮವಾರಪೇಟೆ: ಸಿ ಆ್ಯಂಡ್ ಡಿ ಭೂಮಿಯ ಸೆಕ್ಷನ್-5 ಸರ್ವೆಗೆ ಕೃಷಿಕರಿಗೆ ನೋಟೀಸ್

ಸೋಮವಾರಪೇಟೆ:ತಾಲ್ಲೂಕಿನ ಜಕ್ಕನಳ್ಳಿ ಗ್ರಾಮದಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸೆಕ್ಷನ್-5 ಸರ್ವೆಗೆ ಕೃಷಿಕರಿಗೆ ನೋಟೀಸ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ರಾಜ್ಯ ಸರ್ಕಾರ ನೇಮಿಸಿರುವ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸೆಕ್ಷನ್-5 ಸರ್ವೆಗೆ ಸುತ್ತೋಲೆ ಹೊರಡಿಸಿರುವುದರಿಂದ ಗ್ರಾಮದಲ್ಲಿ ಗ್ರಾಮಸ್ಥರು ಶುಕ್ರವಾರ ಜಾಗೃತಿ ಸಭೆ ನಡೆಸಿ ಚರ್ಚೆ ನಡೆಸಿದರು.

ತಾಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ಹಲವು ದಶಕಗಳಿಂದ ರೈತರು ವ್ಯವಸಾಯ ಮಾಡುತ್ತಿರುವ ಸಿ ಆ್ಯಂಡ್ ಡಿ ವ್ಯವಸಾಯಕ್ಕೆ ಯೋಗ್ಯವಾದ ಸರ್ಕಾರಿ ಭೂಮಿಯಾಗಿದೆ. ದಾಖಲೆಗಳಲ್ಲಿ ಸಿ ಆ್ಯಂಡ್ ಡಿ ಭೂಮಿ ವ್ಯವಸಾಯಕ್ಕೆ ಯೋಗ್ಯವಲ್ಲ ಎಂಬ ಕಾರಣದಿಂದ ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಸಿ ಆ್ಯಂಡ್ ಡಿ ಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡರೆ, ಕೊಡಗಿನ ಬಹುತೇಕ ರೈತರು ಆಸ್ತಿ ಕಳೆದುಕೊಂಡು ಗುಳೆ ಹೋಗಬೇಕಾದ ಅನಿವಾರ್ಯತೆ ಒದಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರನ್ನು ರಕ್ಷಣೆ ಮಾಡುವಂತಹ ಎಲ್ಲಾ ಅವಕಾಶಗಳಿವೆ. ಈಗಾಗಲೇ ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಪಡೆದುಕೊಳ್ಳಲು ಹೋರಾಟ ನಡೆಯುತ್ತಿದೆ.

ಸರ್ವೆಗೆ ನೋಟೀಸು ಬಂದರೆ ಪ್ರತಿಯೊಬ್ಬ ರೈತರು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ತಕರಾರು ಅರ್ಜಿಗಳನ್ನು ಸಲ್ಲಿಸಬೇಕೆಂದು ಎಂದು ಹೇಳಿದರು. ಈಗಾಗಲೇ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಕಾನೂನಿನ ಮೂಲಕವು ಹೋರಾಟವನ್ನು ಮುಂದುವರಿಸಲಾಗುತ್ತದೆ. ರೈತರು ಭಯಭೀತರಾಗಬಾರದು. ಹೋರಾಟ ಮಾಡಿಯಾದರೂ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಸಮಿತಿಯ ಪದಾಧಿಕಾರಿಗಳಾದ ಪೃಥ್ವಿ ಗೌಡಳ್ಳಿ, ಹರಗ ಆದಿತ್ಯ, ಜಕ್ಕನಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ ಹಾಗು ಗ್ರಾಮಸ್ಥರು ಇದ್ದರು.