ಮಿಡಿದ ಶಾಸಕ ಮಂತರ್ ಮನಸ್ಸು: ಮೀನಾಳ ಕುಟುಂಬಕ್ಕೆ ಸ್ವಂತ ಹಣದಿಂದ ಸೂರು

Jun 11, 2025 - 10:16
 0  235
ಮಿಡಿದ ಶಾಸಕ ಮಂತರ್ ಮನಸ್ಸು: ಮೀನಾಳ ಕುಟುಂಬಕ್ಕೆ ಸ್ವಂತ ಹಣದಿಂದ ಸೂರು

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ತಲೆಗೊಂದು ಸೂರು ಮನುಷ್ಯನಿಗೆ ಅತ್ಯವಶ್ಯಕ. ಒಂದೊಳ್ಳೆ ಸುಂದರವಾದ ಮನೆಯನ್ನು ನಿರ್ಮಿಸಿ ಜೀವನ ನಡೆಸಬೇಕೆಂಬ ಕನಸು ಎಲ್ಲರಲ್ಲೂ ಇದೆ.ಆದರೆ ಕೆಲವೊಮ್ಮೆ ಚಂದದ ಮನೆಯ ಕನಸು ಕೈಗೂಡುವುದಿಲ್ಲ.ಈ ಕುಟುಂಬ ಕಳೆದ ಹಲವು ದಶಕಗಳಿಂದ ಪ್ಲಾಸ್ಟಿಕ್ ಮೂಲಕ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು.ಮಳೆಗಾಲದಲ್ಲಿ ಮನೆಯೊಳಗೆ ನೀರು ಸೇರುತ್ತದೆ.ಮನೆಯ ಮಾಳಿಗೆ ಪ್ರತೀ ಬಾರಿ ಮಳೆಗಾಲಕ್ಕೆ ಸೋರುತ್ತಿತ್ತು. ಇಂದೋ,ನಾಳೆಯೋ ಗುಡಿಸಲು ಬೀಳುವ ಆತಂಕದಲ್ಲೇ ವರ್ಷ ಕಳೆದಿದ್ದಾರೆ.ಮತ್ತೊಂದೆಡೆ ಮನೆಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲ.ಪ್ಲಾಸ್ಟಿಕ್ ನಿಂದ ಗುಡಿಸಲು ಕಟ್ಟಿಕೊಂಡು ಹೆಂಚು ಮೇಲೆ ಒಣಗಿದ ಹುಲ್ಲನ್ನು ಹಾಕಿಕೊಂಡು ಗುಡಿಸಲಿನಲ್ಲಿ ದಿನ ದೂಡುತ್ತಿದ್ದರು.ಇದೀಗ ಈ ಕುಟುಂಬಕ್ಕೆ ತನ್ನ ಸ್ವಂತ ಹಣದಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹೊಸ ನಿರ್ಮಿಸಿ ಕುಟುಂಬದ ದಶಕಗಳ‌ ಕನಸನ್ನು ಈಡೇರಿಸಿದ್ದಾರೆ.

ಶಾಸಕರು ಮನೆ ನಿರ್ಮಿಸಿಕೊಟ್ಟ ಕುಟಂಬ ಬೇರೆ ಯಾರೂ ಅಲ್ಲ, 2024ರ ಮೇ 09ರಂದು ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಸಮೀಪದ ಸೂರ್ಲಬ್ಬಿಯ ಕುಗ್ರಾಮವಾದ ಕುಂಬಾರಗಡಿಯಲ್ಲಿ ಪಾಗಲ್ ಪ್ರೇಮಿಯಿಂದ ಹತ್ಯೆಯಾಗಿದ್ದ ಮೀನಾಳ ಕುಟುಂಬಕ್ಕೆ ಇದೀಗ ಮನೆಯ ಭಾಗ್ಯ ಸಿಕ್ಕಿದೆ.ಗುಡಿಸಲಿನಲ್ಲೇ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಸೂರಿನ ಅವಶ್ಯಕತೆ ಬಗ್ಗೆ ಶಕ್ತಿ ಬೆಳಕು ಚೆಲ್ಲಿತ್ತು.ಇದೀಗ ಶಕ್ತಿಯಲ್ಲಿ ವರದಿ ಪ್ರಕಟವಾಗಿ ಒಂದು ವರ್ಷಕ್ಕಿಂತ ಮುನ್ನವೇ "ಸೋರುತ್ತಿದ್ದ ಮೀನಾಳ ಮನೆಗೆ,ಗುಂಡಿಸಲಿನಿಂದ ಮುಕ್ತಿ ಸಿಕ್ಕಿದೆ.

ಒಂದೆಡೆ ಮನೆ ಸಿಕ್ಕ ಸಂತೋಷ! ಮತ್ತೊಂದೆಡೆ ‌ಮಗಳನ್ನ ಕಳೆದುಕೊಂಡ ನೋವು!

ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಸಮೀಪದ ಸೂರ್ಲಬ್ಬಿಯ ಕುಗ್ರಾಮವಾದ ಕುಂಬಾಗರಡಿಯ ದಟ್ಟಾರಣ್ಯದಲ್ಲಿ ಮೀನಾಳ ಕುಟುಂಬ ಜೀವನ ನಡೆಸುತ್ತಿದೆ.ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ 2024ರ ಮೇ 09ರಂದು ತಮ್ಮ ಮಗಳು ಮೀನಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಖುಷಿ ಅದಲ್ಲದೇ ಅದೇ ದಿನ ಆಕೆಯ ನಿಶ್ಚಿತಾರ್ಥ ಕೂಡ ನಡೆದಿತ್ತು.ಸೂರ್ಲಬ್ಬಿಯ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ಏಕೈಕ ವಿದ್ಯಾರ್ಥಿ ಕೂಡ ಮೀನಾಳಾಗಿದ್ದಳು.ಕೇವಲ 16 ವರ್ಷದ ಹೆಣ್ಣುಮಗಳನ್ನು 34 ವರ್ಷದ ಪ್ರಾಯದ ಪ್ರಕಾಶ್ ಎಂಬಾತನಿಗೆ ನಿಶ್ಚಿತಾರ್ಥ ನೆರವೇರಿಸಿಕೊಟ್ಟಿದ್ದರು‌.ಅದೇ ದಿನವೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೀನಾಳ ಮನೆಗೆ ಭೇಟಿ ನೀಡಿ ಕಾನೂನು ಹಾಗೂ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಿ ಮುಚ್ಚಳಿಕೆ ಬರೆಸಿ,ನಿಮ್ಮ ಮಗಳಿಗೆ 18 ವರ್ಷ ಪ್ರಾಯದ ನಂತರ ಮದುವೆ ಮಾಡಿಕೊಡಿ ಎಂದು ಹೇಳಿದ್ದರು.ಆದರೆ ನಂತರ ನಡೆದ ಘಟನೆ ಇಡೀ, ಕೊಡಗು ಜಿಲ್ಲೆ ತಲೆ ತಗ್ಗಿಸುವ ಅಮಾನವೀಯ ಘಟನೆ ಕುಂಬಾರಗಡಿಯ ದಟ್ಟಾರಣ್ಯದ ಮಧ್ಯೆ ನಡೆದಿತ್ತು.ಮೀನಾಳನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಕಾಶ್ ಎಂಬಾತನೇ ಮೀನಾಳ ರುಂಡವನ್ನು ಕತ್ತರಿಸಿಕೊಂಡು ಅಮಾನವೀಯ ರೀತಿಯಲ್ಲಿ ನಡೆದಿಕೊಂಡಿದ್ದನು.ಮೀನಾಳ ಹೆತ್ತ ತಾಯಿಯ ಮುಂದೆಯೇ ಮೀನಾಳ ರುಂಡವನ್ನು ಕತ್ತರಿಸಿ ಪರಾರಿಯಾಗಿ ಎರಡು ದಿನಗಳ ಬಳಿಕ ಪತ್ತೆಯಾಗಿ ಜೈಲು ಸೇರಿದ್ದನು.ಇದಾದ ಬಳಿಕ ಮೀನಾಳ ಮನೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಡಾ ಮಂತರ್ ಗೌಡ ಭೇಟಿ ನೀಡಿ ಸಾಂತ್ವನ ಹೇಳಿದ್ದರು.ಈ ಸಂದರ್ಭದಲ್ಲಿ ಗೃಹ ಸಚಿವರು ವೈಯುಕ್ತಿಕವಾಗಿ 50 ಸಾವಿರ ರೂ ನಗದನ್ನು ಮೀನಾಳ ತಂದೆ-ತಾಯಿಗೆ ನೀಡಿದ್ದರು.ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಪರಿಹಾರ ನೀಡಲು ಕಷ್ಟಸಾಧ್ಯ,ಚುನಾವಣಾ ನೀತಿ ಸಂಹಿತೆ ತೆರವಾದ ಬಳಿಕ ಪರಿಹಾರದ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.

ಭರವಸೆ ನೀಡಿ ಹೊರಟ ಗೃಹ ಸಚಿವರು ಒಂದು ರೂ ಕೂಡ ಸರ್ಕಾರದಿಂದ ಪರಿಹಾರ ನೀಡಿರಲಿಲ್ಲ.ಮೀನಾಳ ಪ್ರಕರಣವನ್ನು ವಿಶೇಷ ಘಟನೆ ಎಂದು ಪರಿಗಣಿಸಿ ಮೀನಾಳ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ ಪರಿಹಾರವನ್ನು ನೀಡಬೇಕೆಂದು ಶಕ್ತಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.ಅದರೊಂದಿಗೆ ಮೀನಾಳ ಪ್ರಕರಣದಲ್ಲಿ ಕೊಡಗು ಜಿಲ್ಲಾ ಬಿಜೆಪಿಯ ಮೌನವನ್ನು ಕೂಡ ಶಕ್ತಿ ಪ್ರಶ್ನಿಸಿತ್ತು.ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಮೀನಾಳ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.ಶಕ್ತಿ ದಿನ ಪತ್ರಿಕೆ ಕೂಡ "ಸೋರುತಿಹುದು ಮೀನಾಳ ಮನೆಯ ಮಾಳಿಗೆ" ಎಂಬ ವರದಿ ಪ್ರಕಟಿಸಿ ಸರ್ಕಾರ ಮತ್ತು ಶಾಸಕರನ್ನು ಎಚ್ಚರಿಸುವಂತಹ ಕೆಲಸ ಮಾಡಿತ್ತು.ಇದೀಗ ಮೀನಾಳ ಕುಟುಂಬಕ್ಕೆ ಮನೆಯನ್ನು ಶಾಸಕ ಡಾ ಮಂತರ್ ಗೌಡ ಅವರು ತಮ್ಮ ಸ್ವಂತ ಖರ್ಚಿನಲ್ಲೇ ನಿರ್ಮಿಸಿಕೊಟ್ಟಿದ್ದಾರೆ.ಹೊಸ ಮನೆ ಸಿಕ್ಕ ಸಂತೋಷ ಒಂದೆಡೆಯಾದರೆ ಮತ್ತೊಂದೆಡೆ ಬಾಳಿ ಕುಟುಂಬಕ್ಕೆ ಬೆಳಕಾಗಬೇಕಿದ್ದ ಮಗಳನ್ನು ಕಳೆದುಕೊಂಡ ನೋವು ಮೀನಾಳ ತಂದೆ-ತಾಯಿ ಹಾಗೂ ಒಡ ಹುಟ್ಟಿದವರಲ್ಲಿ ಕಾಡುತ್ತಿದೆ.ಹೊಸ ಮನೆಯ ಕೀಲಿ-ಕೈ ಹಸ್ತಾಂತರ ಮಾಡುವಾಗ ಮೀನಾ ಇಲ್ಲ ಎಂಬ ನೋವು ಮೀನಾಳ ಕುಟುಂಬಸ್ಥರನ್ನ ನೋವಿನತ್ತ ದೂಡಿದೆ.

ಕೊಟ್ಟ ಮಾತಿನಂತೆ ನಡೆದು,ಮಾನವೀಯತೆ ಮೆರೆದ ಡಾಕ್ಟರ್!

ಪ್ಲಾಸ್ಟಿಕ್ ನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ, ಹೆತ್ತು-ಹೊತ್ತ ಮಗಳನ್ನ ಕಳೆದುಕೊಂಡು ಕುಟುಂಬಕ್ಕೆ ಕೊಟ್ಟ ಮಾತಿನಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅವರು ತಮ್ಮ ಸ್ವಂತಹ ಹಣದಲ್ಲೇ ಸುಸಜ್ಜಿತವಾದ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.ತಮ್ಮ ಅಮೃತ ಹಸ್ತದಿಂದ ನೂತನ ಮನೆಯ ಕೀಲಿ ಕೈಯನ್ನು ಶಾಸಕರು ಮೀನಾಳ ತಂದೆ ಉದಿಯಂಡ ಸುಬ್ರಮಣಿ ಹಾಗೂ ತಾಯಿ ಉದಿಯಂಡ ಜಾನಕಿಗೆ ಹಸ್ತಾಂತರ ಮಾಡಿದ್ದಾರೆ.ಮೀನಾಳ ಹತ್ಯೆಯಾದ ಸಂದರ್ಭದಲ್ಲಿ ಮೀನಾಳ ತಂದೆ-ತಾಯಿಗೆ ಸಾಂತ್ವನ ಹೇಳಲು ಗೃಹ ಸಚಿವರೊಂದಿಗೆ ಆಗಮಿಸಿದ್ದ ಡಾ ಮಂತರ್ ಗೌಡ ಅವರು ಗೂಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ಮೀನಾಳ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಇದೀಗ 8.50 ಲಕ್ಷ ರೂ ವೆಚ್ಚದಲ್ಲಿ ಶಾಸಕರು ಮನೆ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.ಅವರೊಂದಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಡಾ ಮಂತರ್ ಗೌಡ ಅವರ ಘನತೆ -ಗೌರವ ಮತ್ತಷ್ಟು ಹೆಚ್ಚಾಗಿದೆ.ಮೀನಾಳ ಕುಟುಂಬವನ್ನು ಕೈ ಹಿಡಿದಿರುವ ಶಾಸಕ ಡಾ.ಮಂತರ್ ಗೌಡ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಮೃತ ಮೀನಾಳ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ,ನಮಗೆ ವಾಸಿಸಲು ಉತ್ತಮ ಮನೆಯಿಲ್ಲ.ಮಳೆಗಾಲದಲ್ಲಿ ಗುಡಿಸಲು ಮನೆಯಲ್ಲಿ ಇರಲು ಭಯವಾಗುತ್ತದೆ.ಈ ಹಿಂದೆ ಭೂಕುಸಿತಗೊಂಡ ಸಂದರ್ಭದಲ್ಲಿ ಭಯದ ವಾತವರಣದಲ್ಲಿ ಜೀವನ ನಡೆಸಿದ್ದೇವೆ ಎಂದು ಮೀನಾಳ ಪೋಷಕರು ಹೇಳಿದ್ದರು.ಮನೆ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ.ಇದೀಗ ಮೀನಾಳ ಕುಟುಂಬಕ್ಕೆ ನಾನು ಹಾಗೂ ಹಿತೈಷಿಗಳು ಸೇರಿ ಮನೆ ನಿರ್ಮಿಸಿಕೊಟ್ಟಿದ್ದೇವೆ.ಮೀನಾಳ ಹತ್ಯೆಯ ನೋವು ಎಲ್ಲರೂ ಇಂದಿಗೂ ಕಾಡುತ್ತಿದೆ.ಮೀನಾಳ ಆತ್ಮಕ್ಕೆ ಶಾಂತಿ ಸಿಗಲಿ.

ಡಾ.ಮಂತರ್ ಗೌಡ,ಶಾಸಕ ಮಡಿಕೇರಿ ವಿಧಾನಸಭಾ ಕ್ಷೇತ್ರ.

-----------------------------------------

ಶಾಸಕರಾದ ಡಾ.ಮಂತರ್ ಗೌಡ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.ಅವರ ಮಾನವೀಯ ಕಾಳಜಿಗೆ ನಾವು ಆಭಾರಿಯಾಗಿದ್ದೇವೆ.ಆದರೆ ಮೀನಾಳ ನೆನಪು ಪ್ರತಿನಿತ್ಯ ಕಾಡುತ್ತಿದೆ.ಎಲ್ಲರಂತೆ ಕಾಲೇಜಿಗೆ ಹೋಗಬೇಕಾಗಿದ್ದ ಮಗಳು ಬದುಕು ಎಸ್.ಎಸ್‌ಎಲ್.ಸಿ ಪರೀಕ್ಷಾ ಫಲಿತಾಂಶದ ದಿನವೇ ಅಂತ್ಯವಾಗಿದ್ದ ಎಂದು ಯೋಚಿಸಲು ಕೂಡ ಸಾಧ್ಯವಾಗುತ್ತಿಲ್ಲ.ಹೊಸ ಮನೆಯಲ್ಲಿ ನಮ್ಮೊಂದಿಗೆ ನಮ್ಮ ಮಗಳು ಇಲ್ಲದ ನಾವು ಸದಾ ನಮ್ಮಲ್ಲಿ ಕಾಡಲಿದೆ.

ಉದಿಯಂಡ ಜಾನಕಿ,ಮೀನಾಳ ತಾಯಿ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1